March 1, 2026
WhatsApp-Image-2025-06-19-at-10.49.14-AM-1-e1750310667689

ಗೌರಿಬಿದನೂರು: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಸ್ತಬ್ಧಗೊಂಡಿದೆ. ನೆಚ್ಚಿನ ಧಾರ್ಮಿಕ ನಾಯಕನ ಸಾವಿನಿಂದ ಕಂಗಾಲಾಗಿರುವ ಸ್ಥಳೀಯ ಶಿಯಾ ಮುಸ್ಲಿಮರು ಸ್ವಯಂಪ್ರೇರಿತರಾಗಿ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿ ಅಘೋಷಿತ ಬಂದ್ ಆಚರಿಸುತ್ತಿದ್ದಾರೆ.

ಬೆಳಿಗ್ಗೆಯಿಂದಲೇ ರಸ್ತೆಗಿಳಿದ ನೂರಾರು ಗ್ರಾಮಸ್ಥರು ಖಮೇನಿ ಅವರ ಭಾವಚಿತ್ರ ಹಿಡಿದು ಕಣ್ಣೀರು ಹಾಕುತ್ತಾ ಕಂಬನಿ ಮಿಡಿದರು. ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿದ ಜನರು, ದೊಡ್ಡ ಮಟ್ಟದ ಆಕ್ರೋಶ ವ್ಯಕ್ತಪಡಿಸಿದರು. ಅಂಜುಮನ್ ಎ ಜಾಫರಿಯಾ ಸಮಿತಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಗ್ರಾಮದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಸಹ ಆಯೋಜಿಸಲಾಗಿದೆ.

ಅಲೀಪುರ-ಇರಾನ್ ಬಾಂಧವ್ಯ
ವಿಶೇಷವೆಂದರೆ, ಹತರಾದ ಅಲಿ ಖಮೇನಿ ಅವರು 1986ರಲ್ಲಿ ಇದೇ ಅಲೀಪುರಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ಅಂದಿನಿಂದ ಅವರ ಧಾರ್ಮಿಕ ಸಂದೇಶಗಳನ್ನು ಇಲ್ಲಿನ ಜನರು ಅತ್ಯಂತ ನಿಷ್ಠೆಯಿಂದ ಪಾಲಿಸುತ್ತಾ ಬಂದಿದ್ದಾರೆ. ಈ ಹಿಂದೆ ‘ಬೆಳ್ಳಿಕುಂಟೆ’ ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮವು ಬಿಜಾಪುರದ ಆದಿಲ್‌ಶಾಹಿಗಳ ಕಾಲದಲ್ಲಿ ವಲಸೆ ಬಂದವರಿಂದ ‘ಅಲೀಪುರ’ವಾಗಿ ರೂಪಾಂತರಗೊಂಡಿತು ಎನ್ನುವುದು ಇತಿಹಾಸ.

ಗ್ರಾಮದ ಪ್ರತಿಯೊಬ್ಬರಿಗೂ ಇರಾನ್ ಮತ್ತು ಅರಬ್ ದೇಶಗಳೊಂದಿಗೆ ವ್ಯಾಪಾರ ಹಾಗೂ ಶಿಕ್ಷಣದ ಗಾಢ ಸಂಬಂಧವಿದೆ. ಗ್ರಾಮದಲ್ಲೇ ಇರುವ ‘ಅಲಿ ಟಿವಿ’ ಮೂಲಕ ಖಮೇನಿ ಅವರ ಧಾರ್ಮಿಕ ಪ್ರವಚನಗಳು ಜನರನ್ನು ತಲುಪುತ್ತಿದ್ದವು. ಪ್ರಸ್ತುತ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

1986ರಲ್ಲಿ ಅಲೀಪುರಕ್ಕೆ ಖಮೇನಿ ಭೇಟಿ
ಈ ಭೇಟಿಯೇ ಇರಾನ್ ಮತ್ತು ಅಲೀಪುರದ ನಡುವಿನ ಬಾಂಧವ್ಯವನ್ನು ಸಾರುತ್ತದೆ. ಇರಾನ್‌ ಧಾರ್ಮಿಕ ನಾಯಕ ಹಾಗೂ ಅಯಾತೊಲ್ಲಾ ಅಲಿ ಖಮೇನಿ ಅವರ ಗುರು ಅಯಾತೊಲ್ಲಾ ಇಮಾಮ್ ಖಮೇನಿ ಅವರ ಹೆಸರಿನಲ್ಲಿ ಗ್ರಾಮದಲ್ಲಿ ಆಸ್ಪತ್ರೆ ಸಹ ನಿರ್ಮಾಣವಾಗಿದೆ. ಈ ಆಸ್ಪತ್ರೆಯ ಉದ್ಘಾಟನೆಗಾಗಿಯೇ ಅಯಾತೊಲ್ಲಾ ಅಲಿ ಖಮೇನಿ ಅಲೀಪುರಕ್ಕೆ ಬಂದಿದ್ದರು.

ವೈದ್ಯಕೀಯ ಶಿಕ್ಷಣ, ಧಾರ್ಮಿಕ ಶಿಕ್ಷಣ, ಧಾರ್ಮಿಕ ಪ್ರವಾಸದ ಕಾರಣಕ್ಕೆ ಅಲೀಪುರದ ಶಿಯಾ ಮುಸ್ಲಿಮರು ಪ್ರಮುಖವಾಗಿ ಇರಾನ್ ಅವಲಂಬಿಸಿದ್ದಾರೆ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರದ್ದೇ ಪ್ರಾಬಲ್ಯ. ‘ಇರಾನ್‌’ ನಮ್ಮ ಧಾರ್ಮಿಕ ಭೂಮಿ ಎನ್ನುವ ಪೂಜ್ಯ ಭಾವನೆ ಇಲ್ಲಿನ ಜನರದ್ದು. ಇರಾನ್‌ನ ಪರಮೋಚ್ಛನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಧಾರ್ಮಿಕ ಆದೇಶಗಳನ್ನು ಪಾಲಿಸುವ ದೊಡ್ಡ ಜನ ವರ್ಗವೇ ಇಲ್ಲಿದೆ.