

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನ ಘೋಷಣೆ ಶೀಘ್ರದಲ್ಲೇ ಆಗಲಿದ್ದು, ಯುವ ನಾಯಕ ಸುಹೈಲ್ ಕಂದಕ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಗಳನ್ನು ಸುಗಮವಾಗಿ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ವಿಭಜಿಸುವ ಬಗ್ಗೆ ಕೆಪಿಸಿಸಿ ತೀರ್ಮಾನ ಮಾಡಿರುವುದಾಗಿ ತಿಳಿದುಬಂದಿದೆ. ನೂತನವಾಗಿ ಮಂಗಳೂರು ನಗರ ಜಿಲ್ಲಾ ಸಮಿತಿ ಮತ್ತು ಮಂಗಳೂರು ಗ್ರಾಮಾಂತರ ಸಮಿತಿ ರಚಿಸಲು ತೀರ್ಮಾನವಾಗಿದ್ದು, ಶೀಘ್ರದಲ್ಲಿ ಕೆಪಿಸಿಸಿ ಆದೇಶ ಹೊರಡಿಸಲಿದೆ
ಮಂಗಳೂರು ನಗರ ಸಮಿತಿಗೆ ಅಲ್ಪಸಂಖ್ಯಾತ ನಾಯಕ ಹಾಗೂ ಗ್ರಾಮೀಣ ಸಮಿತಿಗೆ ಬಿಲ್ಲವ ನಾಯಕರನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ನಗರ ಸಮಿತಿಗೆ ಪಕ್ಷದ ಯುವ ಕಾಂಗ್ರೆಸ್ ನಾಯಕ ಸುಹೈಲ್ ಕಂದಕ್ ಹೆಸರು ಕೇಳಿಬರುತ್ತಿದ್ದು, ಪಕ್ಷ ಸಂಘಟನೆ, ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಮುಸ್ಲಿಂ ಸಮುದಾಯದ ಬೆಂಬಲ ಪಡೆದಿರುವ ಸುಹೈಲ್ ನೇಮಕಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಶಾಸಕರು ಗೆದ್ದಾಗ ಅಧ್ಯಕ್ಷರಾಗಿದ್ದು ಅಲ್ಪಸಂಖ್ಯಾತ ನಾಯಕ ಕೋಡಿಜಾಲ್, ಹಾಗಾಗಿ ಒಂದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುಹೈಲ್ ಹೆಸರು ಕೇಳಿಬರುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್, ಫೇಸ್ಬುಕ್ ಗಳಲ್ಲಿ ಕಾರ್ಯಕರ್ತರು ಸುಹೈಲ್ ಪರ ಬೆಂಬಲ ವ್ಯಕ್ತಪಡಿಸಿ ರಾಜ್ಯ ನಾಯಕರಿಗೆ ಒತ್ತಾಯ ಮಾಡುತ್ತಿರುವುದು ಕಂಡುಬರುತ್ತಿದೆ.
ಗ್ರಾಮೀಣ ಸಮಿತಿಗೆ ಕಳೆದ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪದ್ಮರಾಜ್ ಆರ್ ಪೂಜಾರಿ ಅವರ ಹೆಸರು ಕೇಳಿಬರುತ್ತಿದ್ದು, ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಜವಾಬ್ದಾರಿ ಸಿಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ತಿಳಿದು ಬಂದಿದೆ.