February 23, 2026
BJP-Leader-Sukhbir-Singh-Jaunapuria (1)

ಜೈಪುರ: ‘ನೀವು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುತ್ತೀರಿ’ ಅಂತ ಹೇಳಿ ಮುಸ್ಲಿಂ ಮಹಿಳೆಗೆ ಕಂಬಳಿ ನೀಡಲು ಬಿಜೆಪಿ ನಾಯಕ ನಿರಾಕರಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಟೋಂಕ್ ಸವಾಯಿ ಮಾಧೋಪುರ್‌ನ ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಸುಖಬೀರ್ ಸಿಂಗ್ ಜೌನಪುರಿಯ ಅವರು ಕಂಬಳಿ ವಿತರಣೆ ಸಮಾರಂಭದಲ್ಲಿ ಭಾಗಿಯಾಗಿದ್ದರು. 2014 ರಿಂದ 2024 ರವರೆಗೆ ಸಂಸದರಾಗಿದ್ದ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸುವವರಿಗೆ ಕಂಬಳಿ ಹೊಂದುವ ಹಕ್ಕಿಲ್ಲ ಎಂದು ಮಹಿಳೆಗೆ ಹೇಳುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಮಹಿಳೆಯರಿಗೆ ಸಿಂಗ್‌ ಕಂಬಳಿ ಹಂಚುವಾಗ, ಒಬ್ಬ ಮಹಿಳೆಯ ಹೆಸರು ಹೇಳುತ್ತಾರೆ. ಆಕೆ ಮುಸ್ಲಿಂ ಹೆಸರು ಹೇಳಿದಾಗ, ಆಕೆ ಮುಸ್ಲಿಂ ಹೆಸರು ಹೇಳುತ್ತಾರೆ. ಸಿಂಗ್‌, ತನ್ನ ಸಹಾಯಕರಿಗೆ ಕಂಬಳಿ ವಾಪಸ್‌ ನೀಡುವಂತೆ ಮಹಿಳೆಗೆ ತಿಳಿಸುತ್ತಾರೆ. ನಂತರ, ‘ನನ್ನ ಮಾತು ಕೇಳಿ.. ಪ್ರಧಾನಿ ಮೋದಿಯನ್ನು ನಿಂದಿಸುವವರು ಕಂಬಳಿ ತೆಗೆದುಕೊಳ್ಳುವ ಹಕ್ಕಿಲ್ಲ’ ಎಂದು ಹೇಳಿದ್ದಾರೆ. ಈ ಸನ್ನಿವೇಶದ ವೀಡಿಯೋ ವೈರಲ್‌ ಆಗಿದೆ.

ಮುಸ್ಲಿಂ ಮಹಿಳೆಯರಿಗೆ ಕಂಬಳಿ ನಿರಾಕರಿಸಿದ್ದಕ್ಕಾಗಿ ಕೆಲವರು ಬಿಜೆಪಿ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗಂಟೆಗಟ್ಟಲೆ ಕಾದು ನಿಂತಿದ್ದ ಮಹಿಳೆಯರನ್ನು ಖಾಲಿ ಕೈಲಿ ಕಳುಹಿಸಿದ್ದಾರೆ. ಕಂಬಳಿಯನ್ನು ನನ್ನ ವೈಯಕ್ತಿಕ ಹಣದಿಂದ ನೀಡುತ್ತಿದ್ದೇನೆ, ಇದಕ್ಕೆ ಸರ್ಕಾರಿ ಹಣ ಬಳಸಿಲ್ಲ ಎಂದು ಬಿಜೆಪಿ ನಾಯಕ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಟೋಂಕ್ ಸವಾಯಿ ಮಾಧೋಪುರದ ಕಾಂಗ್ರೆಸ್ ಸಂಸದ ಹರೀಶ್ ಚಂದ್ರ ಮೀನಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದು, ಸಿಂಗ್ ಅವರ ನಡವಳಿಕೆ ಖಂಡನೀಯ ಮತ್ತು ದೇಶದ ಸಾಮಾಜಿಕ ರಚನೆಯನ್ನು ನಾಶಮಾಡುವ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದ್ದಾರೆ.