

ಬೆಂಗಳೂರು: ಐಪಿಎಲ್ -2025ನ್ನು ಕಪ್ ಗೆದ್ದು ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನು ಕೆಲವೇ ಹೊತ್ತಿನಲ್ಲಿ ಬೆಂಗಳೂರಿಗೆ ಆಗಮಿಸಲಿದ್ದು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮದಲ್ಲಿ ಅಭಿನಂದಿಸಲಿದ್ದಾರೆ.
ಸಂಜೆ 6 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಆರ್ ಸಿಬಿ ಆಟಗಾರರ ಸಂಭ್ರಮಾಚರಣೆ ನಡೆಯಲಿದೆ. ಅದಕ್ಕೂ ಮೊದಲು ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ತಂಡದ ಆಟಗಾರರ ವಿಜಯೋತ್ಸವ ಮೆರವಣಿಗೆಯನ್ನು ನಡೆಸುವುದೆಂದು ತೀರ್ಮಾನವಾಗಿತ್ತು.
ಆದರೆ ವಿಜಯೋತ್ಸವ ಮೆರವಣಿಗೆ ಕೊನೆಕ್ಷಣದಲ್ಲಿ ರದ್ದಾಗಿದೆ. ತೆರೆದ ವಾಹನದಲ್ಲಿ ಆರ್ಸಿಬಿ ಆಟಗಾರರ ಮೆರವಣಿಗೆ ಇಲ್ಲ. ಭದ್ರತೆ ದೃಷ್ಟಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಇಲ್ಲ ಎಂದು ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಆರ್ಸಿಬಿ ತಂಡದ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಅಭಿನಂದನೆ ಸಲ್ಲಿಸಲಾಗುವುದು. ಈ ವೇಳೆ ಆರ್ಸಿಬಿ ತಂಡದ ಪರವಾಗಿ ಒಬ್ಬರು ಮಾತನಾಡಲಿದ್ದಾರೆ. ನಂತರ ಎಲ್ಲಾ ಆಟಗಾರರು ಬಸ್ನಲ್ಲೇ ವಿಧಾನಸೌಧದಿಂದ ಸ್ಟೇಡಿಯಂಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಸೀಮಿತ ಪಾರ್ಕಿಂಗ್ ಇರುವುದರಿಂದ ಸಾರ್ವಜನಿಕರು ಮೆಟ್ರೊ ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಲಾಗಿದೆ.
ಸಂಭ್ರಮಾಚರಣೆ ವೇಳೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹೀಗಾಗಿ ಆಟಗಾರರು ಮತ್ತು ಅಭಿಮಾನಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಡಿಜಿ&ಐಜಿಪಿ ಸಲೀಂ ಹಾಗೂ ಸಂಚಾರಿ ಜಂಟಿ ಆಯುಕ್ತ ಎಂ ಎನ್ ಅನುಚೇತ್ ಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಮೊದಲೇ ಸವಾರರಿಗೆ ಬೇರೆ ಬೇರೆ ಮಾರ್ಗದ ವ್ಯವಸ್ಥೆ ಮಾಡಿ. ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಟ್ರಾಫಿಕ್ ನಿಭಾಯಿಸುವಂತೆ ತಿಳಿಸಿದ್ದಾರೆ.