March 22, 2026
Bihar-VV-Pat

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ ಬೆನ್ನಲ್ಲೇ ಸಮಸ್ತಿಪುರ ಜಿಲ್ಲೆಯ ಸರೈರಂಜನ್ ಕ್ಷೇತ್ರದ ಕಾಲೇಜ್‌ವೊಂದರ ಬಳಿ ರಾಶಿರಾಶಿ ವಿವಿ ಪ್ಯಾಟ್ ಸ್ಲಿಪ್‌ಗಳು ಪತ್ತೆಯಾಗಿವೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಈ ಸಂಬಂಧ ಆರ್‌ಜೆಡಿ ಇವುಗಳನ್ನು ಅಸಲಿ ಇವಿಎಂ ಸ್ಲಿಪ್‌ಗಳನ್ನು ಎಂದು ಆರೋಪಿಸಿದೆ. ಆದರೆ ಇದು ಗುರುವಾರ (ನ.6) ಮತದಾನಕ್ಕೆ ಮೊದಲು ನಡೆಸಲಾದ ಅಣಕು ಸಮೀಕ್ಷೆಯಿಂದ ಬಂದ ಸ್ಲಿಪ್‌ಗಳು. ನಿಜವಾದ ಮತದಾನದಿಂದ ಬಂದಿಲ್ಲ ಅಂತ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಚುನಾವಣಾ ಪಾರದರ್ಶಕತೆ ಜೊತೆಗೆ ಯಾವುದೇ ರಾಜಿ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಇದೆಲ್ಲದರ ನಡುವೆ ಕರ್ತವ್ಯಲೋಪ ಆರೋಪದ ಮೇಲೆ ಉಪಚುನಾವಣಾ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ. ಎಫ್‌ಐಆರ್ ಕೂಡ ದಾಖಲಿಸಿದ್ದಾರೆ.

ಇನ್ನೂ 2ನೇ ಹಂತದ ಪ್ರಚಾರ ಕಣ ರಂಗೇರಿದೆ. ಸೀತಾಮರ್ಹಿ, ಬೆಟ್ಟಿಯಾದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ನಮಗೆ ಕಟ್ಟಾ ಸರ್ಕಾರ ಬೇಡ, ಮತ್ತೊಮ್ಮೆ ಎನ್‌ಡಿಎ ಸರ್ಕಾರ ಬೇಕು ಎಂದಿದ್ದಾರೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ಮಕ್ಕಳ ಕೈಗೆ ಪಿಸ್ತೂಲ್, ಡಬಲ್ ಬ್ಯಾರಲ್‌ಬಂದೂಕು ಕೊಡ್ತಾರೆ. ಆದರೆ, ನಾವು ಲ್ಯಾಪ್‌ಟಾಪ್ ಕೊಡುತ್ತೇವೆ. ಬಿಹಾರದ ಮಕ್ಕಳು ಇನ್ನು ಮುಂದೆ ದರೋಡೆಕೋರರಾಗುವುದಿಲ್ಲ. ಬದಲಾಗಿ ವೈದ್ಯ, ಎಂಜಿನಿಯರ್, ವಕೀಲ, ನ್ಯಾಯಾಧೀಶನಾಗುತ್ತಾನೆ ಅಂದಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಿರುಗೇಟು ಕೊಟ್ಟು ಲೋಕಲ್ ಕಟ್ಟಾ ಪದಬಳಕೆ ಪ್ರಧಾನಿ ಹುದ್ದೆಗೆ ತಕ್ಕದಲ್ಲ, ಮೋದಿಯವರು ಇಂಥ ಮಾತುಗಳಿಂದ ಪ್ರಧಾನ ಮಂತ್ರಿ ಸ್ಥಾನದ ಮಾನ ಕಳೆದಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.