March 19, 2026
1692281400-74

ಬೆಂಗಳೂರು : ಆಂತರಿಕ ಕಲಹ, ಡಿನ್ನರ್ ರಾಜಕಾರಣ, ಆಪರೇಷನ್ ಹಸ್ತ ವಿಚಾರ ಇತ್ಯಾದಿಗಳ ಸದ್ದು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಆಗುತ್ತಿದೆ. ಇದೇ ಹೊತ್ತಲ್ಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಇಂದು ಸೋಮವಾರ ರಾಜ್ಯ ರಾಜಧಾನಿಗೆ ಆಗಮಿಸುತ್ತಿದ್ದು, ಮೂರು ಸಭೆಗಳನ್ನು ನಡೆಸಲಿದ್ದಾರೆ. ಮೂಲಗಳ ಪ್ರಕಾರ, ಸುರ್ಜೆವಾಲ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಆಯೋಜಿಸಿರುವ ಜೈ ಬಾಪು, ಜೈ ಸಂವಿಧಾನ್ ಅಧಿವೇಶನಕ್ಕೆ ಪೂರ್ವಸಿದ್ಧತೆಗೆ ಈ ಸಭೆ ನಡೆಸಲಿದ್ದಾರೆ. ಇದೇ ಹೊತ್ತಲ್ಲಿ, ಕಾಂಗ್ರೆಸ್​ನ ಆಂತರಿಕ ಕಲಹ ಸರಿಪಡಿಸುವ ಪ್ರಯತ್ನವನ್ನೂ ಅವರು ಮಾಡುವ ನಿರೀಕ್ಷೆ ಇದೆ. ಕೆಲಸ ಈ ಸಂದರ್ಭದಲ್ಲಿ ಆಗುವ ನಿರೀಕ್ಷೆ ಇದೆ.

ರಾಜ್ಯಸಭಾ ಸಂಸದರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಿನ್ನೆ ತಡರಾತ್ರಿ ಆಗಮಿಸಬೇಕಿತ್ತು. ಇವತ್ತು ಸೋಮವಾರ ಬೆಳಗ್ಗೆ 11 ಗಂಟೆಯೊಳಗೆ ಬೆಂಗಳೂರು ತಲುಪಲಿದ್ದಾರೆ. ಇವತ್ತು ಮೂರು ಸಭೆ ನಡೆಯಲಿದ್ದು, ಮೊದಲ ಸಭೆ ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ. ಕೆಪಿಸಿಸಿ ವಿಸ್ತೃತ ಸರ್ವ ಸದಸ್ಯರ ಸಭೆ ಇದಾಗಿದೆ.

ಮಧ್ಯಾಹ್ನ 3 ಗಂಟೆಗೆ ಇದೇ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯೂ ನಡೆಯುತ್ತದೆ. ಸಂಜೆ 6 ಗಂಟೆಗೆ ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದರಲ್ಲಿ ಸುರ್ಜೆವಾಲ ಕೂಡ ಪಾಲ್ಗೊಳ್ಳಲಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯತ್ತ ಎಲ್ಲರ ಚಿತ್ತ!
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸೋಮವಾರ ಸಂಜೆ 6ಕ್ಕೆ ನಡೆಯಲಿದೆ. ಈ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಪ್ರಸ್ತುತ ಕಾಂಗ್ರೆಸ್​ನ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಈ ಸಭೆ ಪ್ರಾಮುಖ್ಯತೆ ಪಡೆದಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸಂಸದರು, ಮಾಜಿ ಸಂಸದರು, ಶಾಸಕರು, ಸಚಿವರು, ಮಾಜಿ ಸಚಿವರು, ವಿಧಾನಪರಿಷತ್ ಸದಸ್ಯರು, 2023ರ ಚುನಾವಣೆಯ ಪರಾಜಿತ ಕೈ ಅಭ್ಯರ್ಥಿಗಳು, 2024ರ ಲೋಕಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ನಿಗಮ ಮಂಡಳಿಗಳ ಅಧ್ಯಕ್ಷರು, ಮುಂಚೂಣಿ ಘಟಕ, ವಿವಿಧ ಸೆಲ್​ಗಳ ರಾಜ್ಯಾಧ್ಯಕ್ಷರು ಹೀಗೆ ಸಾಕಷ್ಟು ಜನರು ಕೆಪಿಸಿಸಿ ವಿಸ್ತೃತ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಸಭೆಯೂ ಮಹತ್ವ ಪಡೆದಿದೆ.