April 17, 2025
Screenshot_20250316_120457_Samsung Internet

ಮಂಗಳೂರು : ಕರ್ನಾಟಕದ ಇತಿಹಾಸದಲ್ಲಿ ಅತೀ ದೊಡ್ಡ ಡ್ರಗ್ಸ್ ಕಾರ್ಯಾಚರಣೆ ನಡೆದಿದ್ದು, ಮಂಗಳೂರು ಸಿಸಿಬಿ ಪೊಲೀಸರು ರಾಜಧಾನಿ ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್​ ಜಪ್ತಿ ಮಾಡಿದ್ದಾರೆ. ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಕಳೆದ ಐದು ತಿಂಗಳಿಂದ ಕಾರ್ಯಾಚರಣೆ ನಡೆಸಿ ಡ್ರಗ್ಸ್​ ಜಾಲ ಭೇದಿಸಿದ್ದಾರೆ.

ಎಂಡಿಎಂಎ ಡ್ರಗ್ಸ್ ದೆಹಲಿಯ ಲ್ಯಾಬ್​ನಲ್ಲಿ ನಿತ್ಯ ತಯಾರಾಗುತ್ತಿತ್ತು. ವಾರಕ್ಕೊಮ್ಮೆ ಬೆಂಗಳೂರಿಗೆ ವಿಮಾನದಲ್ಲಿ ಮೂಟೆಗಟ್ಟಲೆ ಬರುತ್ತಿತ್ತು. ವಾರಕ್ಕೆ 15-30 ಕೆಜಿ ಮತ್ತು ತಿಂಗಳಿಗೆ ಕನಿಷ್ಠ 100 ಕೆಜಿ ಎಮ್​ಡಿಎಮ್​ಎ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದೆ. ಬೆಂಗಳೂರಿನಲ್ಲಿ ತಿಂಗಳಿಗೆ ಕನಿಷ್ಠ 50-60 ಕೋಟಿ ರೂಪಾಯಿ ಡ್ರಗ್ ವಹಿವಾಟು ನಡೆಯುತ್ತದೆ ಎಂಬ ಅಂಶ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಡ್ರಗ್ ಮಾಫಿಯಾಗೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಸಾಥ್​ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಂಗಳೂರು ಪೊಲೀಸ್ ಕಮಿಷನರ್​ ಅನುಪಮ್ ಅಗರ್ವಾಲ್​ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್ ಕಾರ್ಯಾಚರಣೆ ನಡೆದಿದೆ. 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್​ ಜಪ್ತಿ ಮಾಡಿದ್ದೇವೆ. ದಕ್ಷಿಣ ಆಫ್ರಿಕಾ ದೇಶದ ಇಬ್ಬರು ಪ್ರಜೆಗಳಾದ ಬಂಬಾ ಫಂಟಾ, ಅಬಿಗೈಲ್ ಅಡೋನಿಸ್ ಎಂಬಾತನನ್ನು ಬಂಧಿಸಿದ್ದೇವೆ ಎಂದು ತಿಳಿಸಿದರು.

6 ತಿಂಗಳ ಹಿಂದೆ ಹೈದರ್ ಆಲಿ ಎಂಬಾತನನ್ನು ವಶಕ್ಕೆ ಪಡೆದಿದ್ದೇವು. ಆತನಿಂದ 15 ಗ್ರಾಂ ಎಂಡಿಎಂಎ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದೆವು. ಸಿಸಿಬಿ ಪೊಲೀಸರ ವಿಚಾರಣೆ ವೇಳೆ ನೈಜೀರಿಯಾ ಪ್ರಜೆಯ ಮಾಹಿತಿ ಸಿಕ್ಕಿತ್ತು. ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ 6 ಕೋಟಿ ಮೌಲ್ಯದ ಎಂಡಿಎಂಎ ಸಮೇತ ಪೀಟರ್​ನನ್ನು ವಶಕ್ಕೆ ಪಡೆದಿದ್ದೇವು. ಈ ಪ್ರಕರಣದ ಬಳಿಕ ತನಿಖೆ ನಡೆಸಿ ಕಿಂಗ್​ಪಿನ್ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೇವು.

ಇದರ ಮೂಲ ಪತ್ತೆಗೆ ಇಳಿಯಲು ಕಳೆದ 6 ತಿಂಗಳಿಂದ ಕಾರ್ಯಾಚರಣೆ ನಡೆಸಲಾಯ್ತು. ವಿದೇಶಿ ಪ್ರಜೆಗಳು ಡ್ರಗ್ಸ್​ ಸಾಗಿಸುವ ಮಾಹಿತಿ ಸಿಕ್ಕಿತ್ತು. ಮಾರ್ಚ್​ 14ರಂದು ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ವಿದೇಶಿ ಮಹಿಳೆಯರು ಡ್ರಗ್ಸ್​ ತರುತ್ತಿರುವ ಬಗ್ಗೆ ಮಾಹಿತಿ ದೊರೆಯಿತು ಎಂದು ಹೇಳಿದರು.

ಇಬ್ಬರು ಮಹಿಳೆಯರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಬಂಧಿಸಲಾಗಿದೆ. ಟ್ರಾಲಿ ಟ್ರಾವೆಲ್ ಬ್ಯಾಗ್​ನಲ್ಲಿ ಎಂಡಿಎಂಎ ಡ್ರಗ್ಸ್​ ಇತ್ತು. 75 ಕೋಟಿ ರೂ. ಮೌಲ್ಯದ ಎಂಡಿಎಂಎ ಜಪ್ತಿ ಮಾಡಲಾಗಿದೆ. 4 ಮೊಬೈಲ್​ಗಳು, ಪಾಸ್‌ಪೋರ್ಟ್, 18 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬೆಂಗಳೂರು ಸೇರಿದಂತೆ ಇತರೆ ಭಾಗದ ನೈಜೀರಿಯನ್ ಪೆಡ್ಲರ್​​ಗಳಿಗೆ ಸಾಗಾಟ ಮಾಡುತ್ತಿದ್ದರು. ನಕಲಿ ಪಾಸ್​ಪೋರ್ಟ್ ಹಾಗೂ ನಕಲಿ ವೀಸಾ ಬಳಸಿ ಪ್ರಯಾಣ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಲಿದೆ ಎಂದರು.