June 19, 2025
IMG-20250619-WA0041

ಮಂಗಳೂರು: ಸಿಂಗಲ್ ಸೈಟ್ ಮತ್ತು ಪ್ರಾಪರ್ಟಿ ಕಾರ್ಡ್​​ಗೆ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಮತ್ತು ಬ್ರೋಕರ್​ನ​ನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸರ್ವೇಯರ್ ನಂದೀಶ್ ಮತ್ತು ಬ್ರೋಕರ್ ದಿವಾಕರ್ ಲಂಚ ಸ್ವೀಕರಿಸಿ ಸಿಕ್ಕಿಬಿದ್ದವರು.

ದೂರುದಾರರ ತಾಯಿ ತನ್ನ ಹೆಸರಿನಲ್ಲಿರುವ ಕಂಕನಾಡಿ ಗ್ರಾಮದ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ಫೆಬ್ರವರಿ 2025ರಂದು ಮಂಗಳೂರು ಯು.ಪಿ.ಓ.ಆರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ತಾಯಿಗೆ ವಯಸ್ಸಾಗಿರುವುದರಿಂದ ದೂರುದಾರರೇ ಕಚೇರಿಗೆ ಹೋಗಿ ಕಡತದ ಬಗ್ಗೆ ವಿಚಾರಿಸಿದ್ದಾರೆ. ಸರ್ವೆಯರ್ ನಂದೀಶ್ ಏಪ್ರಿಲ್ 2025ರಂದು ಸರ್ವೆ ನಡೆಸಿ, ನಂತರ 6,500 ರೂ. ಲಂಚದ ಹಣ ಸ್ವೀಕರಿಸಿದ್ದು, ಬ್ರೋಕರ್ ದಿವಾಕರ್ ಮೂಲಕ 20,000 ರೂ. ಲಂಚ ಪಡೆದುಕೊಂಡಿದ್ದಾರೆ.

ನಂತರ ಸರ್ವೆಯರ್ ನಂದೀಶ್ ಬಜಾಲ್ ಮತ್ತು ಕಂಕನಾಡಿ ಗ್ರಾಮದ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ 18,000 ರೂ. ಲಂಚ ನೀಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ದೂರುದಾರರು ಪುರಾವೆಗಳೊಂದಿಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ನಂದೀಶ್ ಜೂನ್ 2025ರಲ್ಲಿ ದೂರುದಾರರಿಂದ 15,000 ರೂ. ಲಂಚದ ಹಣವನ್ನು ದಿವಾಕರ್ ಮೂಲಕ ಪಡೆದುಕೊಂಡಿದ್ದರು. ಒಟ್ಟಾರೆ, ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು 41,500 ರೂ. ಲಂಚ ಪಡೆದುಕೊಂಡಿದ್ದ ನಂದೀಶ್, ಹೆಚ್ಚುವರಿಯಾಗಿ 2,000 ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸರ್ವೆಯರ್ ನಂದೀಶ್ ಮತ್ತು ಬ್ರೋಕರ್ ದಿವಾಕರ್​ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.