ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಸುರಿದ ಮಳೆ ಬುಧವಾರವೂ ಮುಂದುವರೆದಿದೆ. ಹಲವೆಡೆ ಮರಗಳು ಬಿದ್ದು, ಮಣ್ಣು ಕುಸಿದು ಹಾನಿ ಉಂಟಾಗಿದೆ.

ಬೆಳಿಗ್ಗೆ 8ರ ಬಳಿಕ ತುಂತುರು ಮಳೆ ಮತ್ತೆ ಶುರುವಾಗಿದೆ. ಉಳ್ಳಾಲ ತಾಲ್ಲೂಕಿನ ಸಜಿಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ಇಸಮ್ಮ ಅವರ ಮನೆಗೆ ಪಕ್ಕದ ಮಸೀದಿಯ ಆವರಣ ಗೋಡೆ ಬಿದ್ದು ಭಾಗಶಃ ಹಾನಿಯಾಗಿದೆ.
ಕೊಣಾಜೆ ಗ್ರಾಮದ ಆದಿಶಕ್ತಿ ದೇವಸ್ಥಾನ ದಡಸ್ ಎಂಬಲ್ಲಿ ತಡೆಗೋಡೆ ಕುಸಿದಿದೆ. ಕಿನ್ಯ ಗ್ರಾಮದ ಮಹಮ್ಮದ್ ಹನೀಫ್ ಅವರ ಮನೆ ಭಾಗಶಃ ಹಾನಿಗೊಳಗಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ 12 ಗ್ರಾಮಗಳಲ್ಲಿ ಬುಧವಾರ ಬೆಳಿಗ್ಗೆ 8.30 ರವರೆಗಿನ 24 ಗಂಟೆಗಳಲ್ಲಿ 10 ಸೆಂ.ಮೀ. ಗೂ ಅಧಿಕ ಮಳೆಯಾಗಿದೆ.
