February 4, 2026
SIT

ಮಂಗಳೂರು : ಧರ್ಮಸ್ಥಳ ಪ್ರಕರಣ ಕೇಂದ್ರ ಸ್ಥಳವಾದ ಮಹೇಶ್‌ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ವಿಶೇಷ ತನಿಖಾ ತಂಡ ಇಂದು ದಾಳಿ ನಡೆಸಿದೆ.

ಸಾಕ್ಷಿಧಾರನಾಗಿ ಆಗಮಿಸಿ ಈಗ ಪ್ರಕರಣದ ಆರೋಪಿಯಾಗಿರುವ ಚಿನ್ನಯ್ಯನ ಹೇಳಿಕೆಯಂತೆ ಇಂದು ಪೊಲೀಸರು ಕೋರ್ಟ್‌ ಸರ್ಚ್‌ ವಾರಂಟ್‌ ಪಡೆದು ತಿಮರೋಡಿಗೆ ಆಗಮಿಸಿದ್ದಾರೆ.

ಎಸ್‌ಐಟಿ ಉತ್ಕನನ ನಡೆಸಿದ ಬಳಿಕ ತಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್‌ ಬಳಸುತ್ತಿರಲಿಲ್ಲ. ನನ್ನ ಮೊಬೈಲ್‌ ತಿಮರೋಡಿ ಕಡೆಯವರ ಜೊತೆ ಇತ್ತು ಎಂದು ಹೇಳಿದ್ದ.

ಈ ಕಾರಣಕ್ಕೆ ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ಮತ್ತು ಮೊಬೈಲ್‌ ಸಂಗ್ರಹಿಸಲು ಪೊಲೀಸರು ತಿಮರೋಡಿ ನಿವಾಸಕ್ಕೆ ಆಗಮಿಸಿದ್ದಾರೆ.

ಪೊಲೀಸ್‌ ವಾಹನಗಳ ಜೊತೆ ಮಾಧ್ಯಮಗಳ ವಾಹನಗಳು ತಿಮರೋಡಿಗೆ ತೆರಳಿತ್ತು. ಆದರೆ ಪೊಲೀಸರು ತಿಮರೋಡಿಗೆ ಹೋಗುವ ಮಾರ್ಗ ಮಧ್ಯೆಯೇ 1 ಕಿ.ಮೀ ದೂರದಲ್ಲಿ ಎಲ್ಲಾ ಮಾಧ್ಯಮಗಳ ವಾಹನಗಳನ್ನು ತಡೆದಿದ್ದಾರೆ.