April 30, 2025
kannadaprabha_2025-04-29_tg92jepb_doctr-new

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೈದ್ಯೆ ಅಫೀಫಾ ಫಾತಿಮಾ ಎಂಬಾಕೆ ದೇಶ ವಿರೋಧಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ಆಕೆಯನ್ನು ವಜಾಗೊಳಿಸಿದೆ. ಆಸ್ಪತ್ರೆಯ ಹೆಚ್​ಆರ್ ಆಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ. ಹೌದು ನಾನು ಭಾರತೀಯಳು, ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೈದ್ಯೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿದ್ದು ಇದೀಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಇರುವ ಸಂದರ್ಭದಲ್ಲಿಯೇ ವೈದ್ಯೆ ಈ ರೀತಿ ಪೋಸ್ಟ್ ಮಾಡಿರುವುದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ವೈದ್ಯೆ ಅಫೀಫ ಫಾತಿಮಾ ಎಂಬಾಕೆ ದೇಶ ವಿರೋಧಿ ಸಂದೇಶ ಪ್ರಕಟಿಸಿದ್ದು, ಸದ್ಯ ಆಕೆಯ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಹೈಲ್ಯಾಂಡ್ ಆಸ್ಪತ್ರೆ ಹೆಚ್​ಆರ್​ ಮೊಹಮ್ಮದ್ ಅಸ್ಲಾಂ ದೂರು ಆಧರಿಸಿ ಬಿಎನ್​ಎಸ್​​ ಕಲಂ 196(1)(a), 353(2) ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಮಂಗಳೂರಿನ ಹೈಲ್ಯಾಂಡ್ ನ ಖಾಸಗಿ ಆಸ್ಪತ್ರೆಯ ವೈದ್ಯೆಯ ದೇಶ ಹಾಗೂ ಹಿಂದೂ ವಿರೋಧಿ ಬರವಣಿಗೆಯ ಬಗ್ಗೆ ಮಂಗಳೂರು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ವೈದ್ಯೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ವಿಹೆಚ್​​ಪಿ ಮುಖಂಡ ಶರಣ್ ಕುಮಾರ್ ಪಂಪ್ವೆಲ್ ಆಗ್ರಹಿಸಿದ್ದಾರೆ