February 4, 2026
mangaluru-Rain-Death

ಮಗಳೂರು: ಗುಡ್ಡ, ಮನೆ ಕುಸಿದ ಪರಿಣಾಮ ಬಾಲಕಿ, ಮಹಿಳೆ ಸಾವನ್ನಪ್ಪಿರುವ ಮನಕಲುಕುವ ಘಟನೆ ಮಂಗಳೂರಿನ ದೇರಳ ಕಟ್ಟೆ ಸಮೀಪದಲ್ಲಿ ನಡೆದಿದೆ.

ನಯೀಮ (10), ಪ್ರೇಮ ಪೂಜಾರಿ (60) ಮೃತರು. ರಾತ್ರಿಯಿಡೀ ಸುರಿದ ಭಾರೀ ಮಳೆ ಪರಿಣಾಮ ದೇರಳಕಟ್ಟೆ ಸಮೀಪದ ಕಾನಕೆರೆ ಹಾಗೂ ಮೊಂಟೆಪದವು ಕೋಡಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಂದು ಮಗು ಪ್ರಜ್ಞಾನಹೀನ ಸ್ಥಿತಿಯಲ್ಲಿರುವ ತನ್ನ ತಾಯಿಯ ತೋಳನ್ನು ಬಿಗಿದಪ್ಪಿಕೊಂಡಿದೆ. ಇದರೊಂದಿಗೆ ಬದುಕಲು ಹೆಣಗಾಡುತ್ತಿದೆ. ಈ ಮನಕಲುಕುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಏನಿದು ಘಟನೆ?
ಮೊಂಟೆಪದವು ಕೋಡಿಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಕಾಂತಪ್ಪ ಪೂಜಾರಿ ಎಂಬುವವರ ಮನೆ ಮೇಲೆ ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಒಂದೇ ಕುಟುಂಬದ ಐವರು ಸಿಲುಕಿಕೊಂಡಿದ್ದು, ಈ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಸದ್ಯ ಕಾಂತಪ್ಪ ಪೂಜಾರಿ (65) ಅವರನ್ನು ರಕ್ಷಣೆ ಮಾಡಲಾಗಿದ್ದು, ಅಶ್ವಿನಿ (31), ಆರ್ಯನ್ (2.5) ಆರುಶ್ (1) ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ ತಾಯಿ-ಮಕ್ಕಳಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ತಾಯಿ ಮತ್ತು ಮಗು ಜೀವಂತವಾಗಿದ್ದು, ಮತ್ತೊಂದು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದೆ.

ಕಾಂಪೌಡ್ ಕುಸಿದು ಬಾಲಕಿ ಸಾವು:
ಧಾರಾಕಾರ ಮಳೆಯಿಂದಾಗಿ ಕಾನಕೆರೆ ಎಂಬಲ್ಲಿ ನೌಶಾದ್ ಎಂಬುವವರ ಮನೆಯ ಹಿಂಬದಿಯ ಕಾಂಪೌAಡ್ ಕುಸಿದಿದೆ. ಮನೆ ಮೇಲೆ ಮಣ್ಣು ಬಿದ್ದ ಪರಿಣಾಮ ಬಾಲಕಿ ಮೇಲೆ ಕಿಟಕಿ ಬಿದ್ದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.